Monday, July 13, 2015

sanjeyaagutide naDe

ಸಂಜೆಯಿಳಿದು ಕತ್ತಲಾಗುತ್ತಿರಲು, ಗೋಪಾಲಕರಾದ ಕೃಷ್ಣ ರಾಧೆಯರು ಮನೆಗೆ ಮರಳಲು ಸಿದ್ಧರಾಗುತ್ತಿದ್ದಂತೆ ಪ್ರಕೃತಿಯ ಸೌಂದರ್ಯ ಎಂತಿತ್ತು ಎಂದು ಕವಿ ವರ್ಣಿಸುವ ಪರಿ ಇಂತು:

ಸಂಜೆಯಾಗುತಿದೆ ನಡೆ ನಡೆ ಗೆಳೆಯ, ಬೃಂದಾವನದ ಕಡೆ;
ತಾಳೆಯ ಮರಗಳು ತಲೆಯ ತೂಗುತಿವೆ, ಕೆದರುತ ಇರುಳ ಜಡೆ;
ಅಂಜಿಕೆಯಾಗುವ ಮುನ್ನವೇ ಸಾಗುವ, ಬೃಂದಾವನದ ಕಡೆ;

ದಟ್ಟಡವಿಯಲಿ ಪುಟ್ಟ ಬಾಲಕರು, ಕತ್ತಲು ಇಳಿಯುತಿದೆ;
ಮಲ್ಲಿಗೆ ಬಣ್ಣದ ಹಸುಗಳಿಗೆಲ್ಲ, ಕಪ್ಪನು ಬಳಿಯುತಿದೆ;
ಕೃಷ್ಣ ಕಪಿಲೆಯರು ಕಾಣುವುದಿಲ್ಲ, ಅಂಜಿಕೆ ಬೆಳೆಯುತಿದೆ;
ಅಂಜದಿರೆನುವನು ನಂದಕುಮಾರ, ಮುರುಳಿಯ ತುಟಿಗಿಡುತ;
ಅಭಯನಾದವನು ಬಯಲಲಿ ತುಂಬಿದ, ಕೊಳಲ ಉಸಿರು ಬಿಡುತ;
ಇರುಳ ಬಾನಿನಲಿ ತೇಲುತ ಬಂತು, ಹುಣ್ಣಿಮೆ ಬೆಳ್ಳಿ ರಥ;

ಎಲ್ಲಿ ನೋಡಿದರು ಬೆಳದಿಂಗಳ ಮಳೆ, ಮಿದುವಾಯಿತು ನೆಲವು;
ಹಾಲಿನ ಬಟ್ಟಲ ಎತ್ತಿ ಹಿಡಿಯುತಿದೆ, ಕೂ ಎನ್ನುತ ಕೊಳವು;
ಬೆಣ್ಣೆಯ ಮೆತ್ತಿದ ತುಟಿಯನೊರೆಸುತಿದೆ, ಆ ಯಮುನಾ ಜಲವು;
ಗೋಪ ಬಾಲಕರು ಕುಣಿಯುತಲಿಹರು, ಕೊಳಲುಲಿ ಕೇಳುತ್ತ;
ಮರೆತ ಸಾಲುಗಳ ಒರತೆಯ ಬಗಿದು, ಗೀತವ ಪಲುಕುತ್ತ;
ಹಸುಗಳ ಕೊರಳಿನ ಗಂಟೆಯಲುಗಿಸಿ, ನಾದಕೆ ಸಿಲುಕುತ್ತ; 
ತಾರ ಲೋಕವ ನಿಲುಕುತ್ತ.

ಕವಿ: ಹೆಚ್ ಎಸ್ ವೆಂಕಟೇಶ್ ಮೂರ್ತಿ 
ಸಂಕಲನ : ತೂಗು ಮಂಚ 


No comments: