Monday, December 23, 2013

Neenu mugilu naanu nela

ಆಕಾಶದಲ್ಲಿ ತೇಲುತ್ತಿರುವ ಮೋಡಗಳು ಭೂಮಿಯನ್ನಗಲಿ ಎಷ್ಟು ದೂರದಲ್ಲಿದ್ದರೇನು, ಅವೆರಡರ ನಡುವಿನ ಸಂಬಂಧದ ಪರಿಣಾಮ ಪ್ರಕೃತಿಯಲ್ಲಿ ವರ್ಣರಂಜಿತವಾಗಿ ತೋರುವುದಿಲ್ಲವೇ. ಆಗಸದಲ್ಲಿ ದೂರದಲ್ಲಿದ್ದರೇನಂತೆ ಅವೆರಡರ ಒಡನಾಟ ಕಣ್ಣು-ರೆಪ್ಪೆಗಳಷ್ಟೇ ಸಮೀಪ ಅಲ್ಲವೇ. ಭೂಮಿ-ಬಾನುಗಳ ಉದಾಹರಣೆಯೊಂದಿಗೆ, ಪ್ರೀತಿ-ಬಾಂಧವ್ಯಗಳ ಸೆಳೆತ ಎರಡು ಜೀವಗಳ ಅಂತರವನ್ನು ಮೀರಿ ಹೇಗೆ ವ್ಯಾಪಿಸುತ್ತದೆ ಎಂಬ ಭಾವ ಕವಿಯ ಮಾತುಗಳಲ್ಲಿ ಹೀಗೆ ಹೊಮ್ಮಿದೆ.

  ನೀನು ಮುಗಿಲು, ನಾನು ನೆಲ; ನಿನ್ನ ಒಲವೆ, ನನ್ನ ಬಲ;
  ನಮ್ಮಿಬ್ಬರ ಮಿಲನದಿಂದ, ಉಲ್ಲಾಸವೇ ಶ್ಯಾಮಲಾ.

  ನಾನು ಎಳೆವೆ, ನೀನು ಮಣಿವೆ; ನಾನು ಕರೆವೆ, ನೀನು ಸುರಿವೆ;
  ನಮ್ಮಿಬ್ಬರ ಒಲುಮೆ ನಲುಮೆ ಜಗಕಾಯಿತು ಹುಣ್ಣಿಮೆ.
  ನಾನಚಲದ ತುಟಿಯೆತ್ತುವೆ, ನೀ ಮಳೆಯೊಳು ಮುತ್ತನಿಡುವೆ;
  ನಿನ್ನಿಂದಲೇ, ತೆರೆವುದೆನ್ನ ಚೈತನ್ಯದ ಕಣ್ಣೆವೆ.

  ಸೂರ್ಯ ಚಂದ್ರ ಚಿಕ್ಕೆಗಣ್ಣ, ತೆರೆದು ನೀನು ಸುರಿವ ಬಣ್ಣ;
  ಹಸಿರಾಯಿತು, ಹೂವಾಯಿತು, ಚೆಲುವಾಯಿತು ಈ ನೆಲ.
  ನೀನು ಗಂಡು ನಾನು ಹೆಣ್ಣು, ನೀನು ರೆಪ್ಪೆ ನಾನು ಕಣ್ಣು;
  ನಮ್ಮಿಬ್ಬರ ಮಿಲನದಿಂದ ಸುಫಲವಾಯ್ತು ಜೀವನ;

  - ರಚನೆ : ರಾಷ್ಟ್ರಕವಿ ಶ್ರೀ ಜಿ.ಎಸ್. ಶಿವರುದ್ರಪ್ಪ


ಕವಿ ಜಿ.ಎಸ್.ಎಸ್ ರವರು ಪರಲೋಕವಾಸಿಗಳಾದ ಈ ದಿನ, ಅವರ ಆತ್ಮಕ್ಕೆ ಶಾಂತಿ ಕೋರುತ್ತ, ಭಾವಪೂರ್ಣ ಶ್ರದ್ಧಾಂಜಲಿಯೊಂದಿಗೆ ಈ ರಚನೆಯನ್ನು ಅಂತರ್ಜಾಲದಲ್ಲಿ ತುಳುಕಿಸುತ್ತಿದ್ದೇನೆ. ಕವಿ ಹೃದಯಕ್ಕೆ ನನ್ನ ಪುಟ್ಟ ನಮನ.

Sunday, December 8, 2013

Krishnana shyamala vakshadamele

ಶ್ರೀ ಕೃಷ್ಣ ಮತ್ತು ರಾಧೆಯರ ನಡುವಿನ ಪ್ರೀತಿಗೆ ಭಾವಪರವಶರಾಗದವರು ಯಾರು. ಆ ಪವಿತ್ರ ಪ್ರೇಮದ ಬಗೆಗೆ ತಿಳಿದು ನಾನು ಹಲವೊಮ್ಮೆ ಅಸೂಯೇಪಡುವುದುಂಟು. ಸಂಬಂಧಗಳನ್ನು ವ್ಯಾವಹಾರಿಕ ಭಾವನೆಗಳಿಂದ ಅಳೆಯುವುದರಲ್ಲಿ ಮೈ ಮರೆತಿರುವ ಸಮಾಜದಲ್ಲಿ ಇಂತಹ ಪವಿತ್ರವಾದ ಪ್ರೀತಿಯ ಕಥೆಯನ್ನು ಕೀಳಿ ಮೈ ಪುಳಕಿತಗೊಳ್ಳುವುದಿಲ್ಲವೇ. ಕೃಷ್ಣ ರಾಧೆಯರ ಸರಸ ಸಲ್ಲಾಪಗಳಲ್ಲಿ ಮಗ್ನರಾಗಿದ್ದಾಗ ಕಂಡ ದೃಶ್ಯವನ್ನು ಕವಿಯೊಬ್ಬರು ವರ್ಣಿಸಿದ್ದು ಇಂತು:

ಕೃಷ್ಣನ ಶ್ಯಾಮಲ ವಕ್ಷದ ಮೇಲೆ, ಕಾಳ ನಾಗರವು ಹರಿಯುತಿದೆ;
ನಾಗರವಲ್ಲ, ನಾಗವೇಣಿಯ ನೀಳ್ಜಡೆ ಮೆರೆಯುತಿದೆ;
ನೋಡು, ನೀಳ್ಜಡೆ ಮೆರೆಯುತಿದೆ;

ಕೃಷ್ಣನ ನೈದಿಲೆ ಕೆನ್ನೆಯ ಮೇಲೆ, ರಕ್ತದ ಬಿಂದುವು ಕಾಣುತಿದೆ;
ರಕ್ತವು ಅಲ್ಲ, ಬಿಂಬಾಧರೆಯ ಬಿಂದಿಯು ಮೆರೆಯುತಿದೆ;
ನೋಡು ಬಿಂದಿಯು ಮೆರೆಯುತಿದೆ;

ಕೃಷ್ಣನ ಚಾಚಿದ ತೋಳಿನ ಮೇಲೆ, ಹೆಡೆಯಿಲ್ಲದ ಕಾಮನಬಿಲ್ಲು;
ಬಿಲ್ಲದು ಅಲ್ಲ, ಮಾನಿನಿಯಲ್ಲೇ ಮೇಲುದು ಮರೆತಿಹಳು;
ನೋಡು ಮೇಲುದು ಮರೆತಿಹಳು;

ಕೃಷ್ಣನ  ಪಾದಾಂಬುಜಗಳ ಮೇಲೆ, ಮಂಜಿನ ಹನಿಗಳು ಹೊಳೆಯುತಿವೆ;
ಇಬ್ಬನಿಯಲ್ಲ, ಶ್ರೀ ಹರಿ ಪಾದವ ರಾಧೆಯ ಕಂಬನಿ ತೊಳೆಯುತಿವೆ;
ರಾಧೆಯ ಕಂಬನಿ ತೊಳೆಯುತಿವೆ;

ಕವಿ : ಹೆಚ್ ಎಸ್ ವೆಂಕಟೇಶ್ ಮೂರ್ತಿ
ಸಂಕಲನ : ತೂಗು ಮಂಚ